ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗೆ ಪಾಟ್ನಾದಲ್ಲಿ ಕ್ರೈಸ್ತ ಅಲ್ಪಸಂಖ್ಯಾತ ಮುಖಂಡರ ಮಹತ್ವದ ಸಮಾವೇಶ


ದೆಹಲಿ / ಪಾಟ್ನಾ:
ದೇಶದಲ್ಲಿ ಕ್ರೈಸ್ತ ಅಲ್ಪಸಂಖ್ಯಾತ ಸಂಸ್ಥೆಗಳು ಹಾಗೂ ಸಭೆಗಳು ಎದುರಿಸುತ್ತಿರುವ ಆಡಳಿತಾತ್ಮಕ ಮತ್ತು ಕಾನೂನು ಸಂಬಂಧಿತ ಸವಾಲುಗಳ ನಡುವೆ, ಅವುಗಳನ್ನು ಕಾನೂನುಬದ್ಧವಾಗಿ ಇನ್ನಷ್ಟು ಸಬಲಗೊಳಿಸುವ ಉದ್ದೇಶದಿಂದ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಮಹತ್ವದ ಸೆಮಿನಾರ್ ಬಿಹಾರದ ಪಾಟ್ನಾದ ದಿಘಾದಲ್ಲಿರುವ ‘ಆತ್ಮ ದರ್ಶನ್’ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಯಿತು.

ಮೇ 17 ರಿಂದ 20ರವರೆಗೆ ನಡೆದ ಈ ರಾಷ್ಟ್ರೀಯ ಸಮಾವೇಶದಲ್ಲಿ ಬಿಹಾರ, ಝಾರ್ಖಂಡ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪ್ರೊವಿನ್ಷಿಯಲ್‌ಗಳು, ಪ್ರಿನ್ಸಿಪಾಲರು, ಸಂಸ್ಥೆಗಳ ಮ್ಯಾನೇಜರ್‌ಗಳು, ಟ್ರೆಷರರ್‌ಗಳು ಸೇರಿದಂತೆ ಸುಮಾರು 45 ಪ್ರಮುಖ ಕ್ರೈಸ್ತ ಪ್ರತಿನಿಧಿಗಳು ಭಾಗವಹಿಸಿ ಸಂವಿಧಾನಾತ್ಮಕ ಹಕ್ಕುಗಳ ಕುರಿತು ಆಳವಾದ ಚರ್ಚೆ ನಡೆಸಿದರು.

ಸಂವಿಧಾನಾತ್ಮಕ ಹಕ್ಕುಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಪರಿಣತಿ ಹೊಂದಿರುವ ಹಿರಿಯ ನ್ಯಾಯವಾದಿ ರೆವರೆಂಡ್ ಕೆ.ಎಂ. ಜೋಸೆಫ್ ಎಸ್.ಜೆ. ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಪಾಟ್ನಾ ಹಾಗೂ ರಾಂಚಿ ಹೈಕೋರ್ಟ್‌ಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾನೂನು ಸೇವೆ ಸಲ್ಲಿಸಿರುವ ಅವರು, ಕ್ರೈಸ್ತ ಸಂಸ್ಥೆಗಳಿಗೆ ಲಭ್ಯವಿರುವ ಕಾನೂನುಬದ್ಧ ರಕ್ಷಣೆಗಳು ಮತ್ತು ಹಕ್ಕುಗಳ ಕುರಿತು ವಿಶೇಷ ತರಗತಿಗಳನ್ನು ನಡೆಸಿದರು.

ಸೆಮಿನಾರ್‌ನಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು, ಆಡಳಿತಾತ್ಮಕ ಕಾರ್ಯವಿಧಾನಗಳು, ಕಾರ್ಮಿಕ ಕಾನೂನುಗಳು, ಸೈಬರ್ ಕಾನೂನು, ಪೋಕ್ಸೋ ಮತ್ತು ಪೋಷ್ ಕಾಯಿದೆಗಳ ಅಡಿಯಲ್ಲಿ ಸುರಕ್ಷತಾ ನೀತಿಗಳು, ಭೂ ವಿವಾದಗಳು ಹಾಗೂ ಎಫ್‌ಸಿಆರ್‌ಎ ನಿಯಮಗಳು ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ಕಾನೂನು ಜಾಗೃತಿ ಮತ್ತು ಸಂವಿಧಾನಾತ್ಮಕ ಅರಿವು ಹೆಚ್ಚಿಸುವ ಮೂಲಕ ಅಲ್ಪಸಂಖ್ಯಾತ ಸಂಸ್ಥೆಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಈ ಸಮಾವೇಶ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW