ಹೈದರಾಬಾದ್: ಆಂಧ್ರಪ್ರದೇಶದ ಅರಣ್ಯ ಪ್ರದೇಶದಲ್ಲಿ ಪಾಸ್ಟರ್ ದಾರಾ ಅಭಿನಯ್ ದರ್ಶನ್ ಮೇಲೆ ನಡೆದಿತ್ತೆಂದು ಹೇಳಲಾದ ದಾಳಿ ಪ್ರಕರಣ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ರಕ್ತಸ್ರಾವವಾಗಿರುವ ದೃಶ್ಯಗಳನ್ನು ಕಂಡ ಸ್ಥಳೀಯರು ಮತ್ತು ವಿಶ್ವಾಸಿಗಳು ಆರಂಭದಲ್ಲಿ ಬೆಚ್ಚಿಬಿದ್ದಿದ್ದರು. “ಕ್ರೈಸ್ತರ ವಿರುದ್ಧದ ದಾಳಿ” ಎಂಬ ಆರೋಪವೂ ವ್ಯಾಪಕವಾಗಿ ಕೇಳಿಬಂದಿತ್ತು.
ಆದರೆ ಚಿಂತಪಳ್ಳಿ ಪೊಲೀಸರು ನಡೆಸಿದ ತನಿಖೆಯಲ್ಲಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದಾಳಿ ಹೊರಗಿನವರಿಂದ ನಡೆದದ್ದಲ್ಲ, ಬದಲಾಗಿ ಪೂರ್ವನಿಯೋಜಿತವಾಗಿ ರೂಪಿಸಿದ್ದ ನಾಟಕ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಎಲ್ಲಿ ವಾಹನ ನಿಲ್ಲಿಸಬೇಕು, ಯಾವ ಸಮಯದಲ್ಲಿ ದಾಳಿ ನಡೆಯಬೇಕು ಎಂಬುದರ ಕುರಿತ ವಾಟ್ಸ್ಆಪ್ ಧ್ವನಿ ಸಂದೇಶಗಳು ಮತ್ತು ವಿಡಿಯೋ ಸಾಕ್ಷ್ಯಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ ಎನ್ನಲಾಗಿದೆ.
ಭರೋಸಾ ಪಕ್ಷದ ಸ್ಥಾಪಕರಾದ ಅಭಿನಯ್ ದರ್ಶನ್ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಕೀಯ ಸಹಾನುಭೂತಿ ಗಳಿಸಲು ಹಾಗೂ ಸಾಮಾಜಿಕ ಉದ್ವಿಗ್ನತೆ ಸೃಷ್ಟಿಸಲು ಈ ಕೃತ್ಯ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯನ್ನು ಆಂಧ್ರಪ್ರದೇಶ ಕ್ರೈಸ್ತ ಮುಖಂಡರ ವೇದಿಕೆಯೂ ಹಾಗೂ ಕರ್ನಾಟಕ ಪೆಂಟೆಕೋಸ್ಟಲ್ ಚರ್ಚ್ಸ್ ಅಸೋಸಿಯೇಶನ್ ತೀವ್ರವಾಗಿ ಖಂಡಿಸಿದೆ.
