ಗೋಪಾಲಪುರದ ಸಂತ ಅಂತೋಣಿ ಚರ್ಚ್‌ನಲ್ಲಿ ಶ್ರದ್ಧಾಭಕ್ತಿಯಿಂದ Good Friday ಆಚರಣೆ

 


ಶನಿವಾರದಂತೆ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೋಪಾಲಪುರದ ಸಂತ ಅಂತೋಣಿ ಚರ್ಚ್‌ನಲ್ಲಿ ಗುಡ್ ಫ್ರೈಡೆ ಅಂಗವಾಗಿ ಶಿಲುಬೆ ಮಾರ್ಗ ಪ್ರಾರ್ಥನೆಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಚರ್ಚ್‌ನ ಫಾದರ್ ಕ್ರಿಸ್ಟೋಫರ್ ಸಗಾಯರಾಜ್ ಅವರ ನೇತೃತ್ವದಲ್ಲಿ ಶಿಲುಬೆ ಬೆಟ್ಟದಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯಿತು. ಈ ಸಂದರ್ಭದಲ್ಲಿ 15 ಶಿಲುಬೆ ಹಂತಗಳನ್ನು ಅನುಸರಿಸಿ, ಪ್ರತಿಯೊಂದು ಶಿಲುಬೆಯಲ್ಲೂ ಯೇಸು ಕ್ರಿಸ್ತನು ಅನುಭವಿಸಿದ ಪೀಡೆಯನ್ನು ಸ್ಮರಿಸಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ದೇಶದ ಶಾಂತಿ, ಕರ್ನಾಟಕ ರಾಜ್ಯದ ಒಳಿತು ಹಾಗೂ ಸಮಸ್ತ ಜನರ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಶಿಲುಬೆ ಮಾರ್ಗ ಪ್ರಾರ್ಥನೆ ನಂತರ ಚರ್ಚ್‌ನಲ್ಲಿ ಶಿಲುಬೆಗೆ ಗೌರವ ಸಲ್ಲಿಸುವ ವಿಧಿ ನೆರವೇರಿತು. ಭಕ್ತಾದಿಗಳು ಶಿಲುಬೆಗೆ ಸನ್ಮಾನ ಸಲ್ಲಿಸಿ ಆರಾಧನಾ ವಿಧಿಗಳಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಫಾದರ್ ಕ್ರಿಸ್ಟೋಫರ್ ಸಗಾಯರಾಜ್, ಸಿಸ್ಟರ್ ಲೂಸಿ, ಚರ್ಚ್ ಸಲಹಾ ಸಮಿತಿ ಸದಸ್ಯರು ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.